ಟಿ.ಎಸ್.ಗೊರವರ ಅನುಭವಗಳಿಂದ ಗಟ್ಟಿಗೊಂಡ ಕಥೆಗಾರ. ಸಾಮಾನ್ಯ ಜನಜೀವನ ಹಾಗೂ ಹಾಗೂ ಗ್ರಾಮೀಣ ಹಿನ್ನೆಲೆಯ ಕಥೆಗಳನ್ನು ಇವರು ಮನಮುಟ್ಟುವ ಹಾಗೆ ಕಥೆಯಲ್ಲಿ ತರುತ್ತಾರೆ. ಈಗಾಗಲೇ ಕೆಲವು ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುವ ಗೊರವರ ಅವರ ‘ಕುರಿ ಕಾಯೋ ರಂಗನ ಕಥೆ’ ಕೂಡ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿದೆ.
ಭಾಗ- ೨
ರಂಗ ಊರು ತಲುಪಿದಾಗ ಅದು ಕತ್ತಲ ಚಾದರ ಹೊದ್ದು ಕೊಂಡಿತ್ತು. ಅಲ್ಲೊಂದು ಇಲ್ಲೊಂದು ಮೆನಯಲ್ಲಿ ಬುಡ್ಡಿ ಚಿಮಣಿ ಪಿಳಿ ಪಿಳಿ ಕಣ್ಣು ಬಿಡತೊಡಗಿದ್ದವು. ಅದ್ಯಾರದೋ ಮನೆಯ ರೇಡಿಯೊದಲ್ಲಿ ರಾಜಕುಮಾರ ಹಾಡತೊಡಗಿದ್ದ. ಕುಡಿದ ವ್ಯಕ್ತಿಯೊಂದು ಜೋಲಿ ಹೊಡೆಯುತ್ತಾ, ಇಳಿಜಾರಿನಲ್ಲಿ ಬ್ರೇಕು ತಪ್ಪಿದ ಗಾಡಿಯಂತೆ ಬರತೊಡಗಿದ್ದ. ಹುಚ್ಚು ಹಿಡಿದ ಮುದುಕಿಯೊಂದು ತಿಪ್ಪೆಯ ನೆತ್ತಿಯ ಮ್ಯಾಲೆ ಕುಂತು ಅದೇನನ್ನೋ ಬಯ್ಯತೊಡಗಿತ್ತು. ರಂಗ ಹೊಸ ಲೋಕದೊಳಗೆ ಕಾಲಿಟ್ಟಂತೆ ಆ ಕಡೆ ಈ ಕಡೆ ದೃಷ್ಟಿ ಬೀರುತ್ತಾ ಮನೆ ತಲುಪಿದ.
ಮನೆಯಂದರೆ ಅದು ತೊಲೆಗಂಬದ ಮಡಿಗೆ ಮನೆಯಲ್ಲ. ಮ್ಯಾಲೆ ತಗಡು ಹೊದೆಸಿ ಸುತ್ತಲೂ ಗೋಡೆಯಂತೆ ನುಗ್ಗೆ ಕಟ್ಟಿಗೆಯ ತಡಿಕೆ ಹೆಣೆದು, ಅದಕ್ಕೆ ಸೆಗಣಿಯನ್ನು ಅಳಕು ಮಾಡಿ ಮೆತ್ತಿ, ಅದರ ಮ್ಯಾಲೆ ನೀಟಾಗಿ ಸುಣ್ಣ ಬಳೆದ ಮನೆಯದು.
ಒಳಗೆ ರಂಗನ ಅವ್ವ ದ್ಯಾಮವ್ವ ಒಲೆ ಊದುತ್ತಿರುವ ಸದ್ದು ಕೇಳಿಸತೊಡಗಿತ್ತು. ಹೊರಗಡೆ ಅದ್ಯಾರೊ ಮಾತಾಡುತ್ತಿರುವ ದನಿ ಕೇಳಿ ದ್ಯಾಮವ್ವ ಊದುಗೋಳಿ ಇಟ್ಟು ಎದ್ದು ಹೊರ ಬಂದಳು. ಕೌದಿ ಹೊದ್ದುಕೊಂಡಿರುವವನನ್ನು ನೋಡಿ ಭಯಗೊಂಡ ದ್ಯಾಮವ್ವ ಚಿಟ್ಟಿಕ್ಕು ಚೀರಿದಳು. ರಂಗ ಮೈ ಮ್ಯಾಲಿನ ಕೌದಿ ಸರಿಸಿ ಮುಖ ತೋರಿದ. ದ್ಯಾಮವ್ವನ ಎದೆಯಾಗ ಹೆದರಿಕೆಯ ಬಿರುಗಾಳಿ ಬೀಸಿದಂಗಾತು. ಮಗನಿಗೆ ಅದೇನಾಗಿದೆಯೊ ಎಂದು ಕಣ್ಣಲ್ಲಿ ನೀರು ತಂದುಕೊಂಡಳು. ಅವನ ಮೈ ಮುಟ್ಟಿ ನೋಡಿದಳು. ಎಳ್ಳು ಸಿಡಿಯುವಷ್ಟು ಬೆಚ್ಚಗಿತ್ತು. ದ್ಯಾಮವ್ವನಿಗೆ ಆತಂಕವಾಗಿ ದೊಡ್ಡ ಮಸೂತಿ ಹತ್ತಿರದ ಆರ್ಎಂಪಿ ಡಾಕ್ಟರ್ ಎಸ್.ಎಲ್.ಉಕ್ಕಿಸಲ ಅವರ ದವಾಖಾನಿಗೆ ತೋರಿಸಲು ಕರಕೊಂಡು ಹೋದಳು.
ಡಾಕ್ಟರು ರಂಗನನ್ನು ಚೆಕ್ಕು ಮಾಡಿ ಯಾಡು ಸೂಜಿ ಚುಚ್ಚಿ ಕ್ಷಣ ಹೊತ್ತು ಅಲ್ಲೇ ಮಲಗಿಸಿ ರೆಸ್ಟು ಮಾಡಲು ಹೇಳಿದರು. ದ್ಯಾಮವ್ವ ರಂಗನಿಗೆ ಒಂದೀಟು ತಡೆದು ಬರಲು ಹೇಳಿ, ತಾನು ಅಡಗಿ ಮಾಡುವುದಾಗಿ ಹೇಳಿ ಮನೆಗೆ ಬಂದಳು.
ಒಂದೀಟು ಹೊತ್ತಿನ ನಂತರ ಮೈ ಬಿಸಿ ಕಡಿಮೆ ಆದಂಗಾಗಿ ಆರಾಮೆನಿಸಿ ಡಾಕ್ಟರು ಕೊಟ್ಟ ಗುಳಿಗೆ ತಗೊಂಡು ಮನೆ ಕಡೆ ಹೆಜ್ಜೆ ಬೆಳೆಸಿದ.
ದವಾಖಾನಿಯಿಂದ ತಮ್ಮ ಮನೆಗೆ ಹೋಗುವ ದಾರಿ ಸಿಗದೆ ರಂಗ ಅಗಸಿವಾರಿ ಹತ್ತಿರದ ಹಾಲಿನ ಕೇಂದ್ರದ ಮುಂದೆ ಅತ್ತ ಇತ್ತ ನೋಡುತ್ತಾ ಜಾತ್ರೆಯೊಳಗೆ ಕಳೆದುಕೊಂಡ ಹುಡುಗನಂತೆ ಅಸಹಾಯಕನಾಗಿ ನಿಂತಿದ್ದ.
ಅದ್ಯಾರದೊ ಮನೆಗೆ ಪೇಸೆಂಟು ನೋಡಲು ಹೋಗಿದ್ದ ಡಾಕ್ಟರು ರಂಗನನ್ನು ನೋಡಿ ಸಿಟ್ಟಾಗಿ ” ರೆಸ್ಟು ಮಾಡೋ ಮಾರಾಯ. ನೀನಿಲ್ಲೆ ನಿಂತು ಆಗಲೇ ಚೈನಿ ಹೊಡಿಯಾಕತ್ತಿ ಅಲ…’ ಎಂದರು.
ರಂಗನಿಗೆ ಏನು ಹೇಳಬೇಕೆನ್ನುವುದೇ ತಿಳಿಯಲಿಲ್ಲ. ನಿರ್ವಾ ಇಲ್ಲದೆ ” ಸಾಹೆಬ್ರ, ನಮ್ಮ ಮನಿ ದಾರಿ ಯಾಕಡೆ ಅಂತ ಸ್ವಲ್ಪ ಹೇಳ್ರಿ. ನಾನು ಬಾಳ ದಿನ ಆತ್ರಿ, ಊರಿಗೆ ಬಂದೇ ಇಲ್ಲ. ಅದಕ್ಕ ನಮ್ಮನಿ ಯಾಕಡೆ ಅಂತ ಗೊತ್ತಾಗವಲ್ದು….’ ಎಂದ.
ರಂಗನ ಕಾಡುತನಕ್ಕೆ ಡಾಕ್ಟರು ಅಚ್ಚರಿಗೊಂಡರು. ಪಾಪ ಅನಿಸಿ ದಾರಿ ತೋರಿಸಿದರು. ಆ ಓಣಿಯ ದಾರಿ ಹಿಡಿದು ಮನೆಗೆ ಬಂದಾಗ ಅವರವ್ವ ಕರಸಿದ್ದಪ್ಪನ ಅಂಗಡಿಯಿಂದ ತಂದಿದ್ದ ಅಕ್ಕಿಯ ಬಿಸಿ ಅನ್ನ ಮಾಡಿ ಇಟ್ಟಿದ್ದಳು. ನಿತ್ಯ ಜ್ವಾಳದ ಸಂಕಟಿ ಉಣ್ಣುತ್ತಿದ್ದ ಅಂವ ಅನ್ನ ಉಂಡು ಅದೆಷ್ಟೋ ದಿನವಾಗಿತ್ತು. ಅವ್ವ ಬಡಿಸಿದ ಅನ್ನ, ತೊಗರಿ ಬ್ಯಾಳಿ ಸಾರು, ಅದ್ಯಾರದೊ ಮನೆಯಿಂದ ಇಸಕೊಂಡು ಬಂದಿದ್ದ ಹುಂಚಿ ಟಕ್ಕು ಸೀಪುತ್ತಾ ಊಟ ಮುಗಿಸಿ, ಗುಳಿಗೆ ತಗೊಂಡು ನಿದ್ದೆಗೆ ಜಾರಿದ.
********
ಮುಂಜಾನೆದ್ದು ರಂಗ ಅನತಿ ದೂರದ ತಿಪ್ಪೆಯಲ್ಲಿ ಉಚ್ಚೆ ಹೋದ. ಅವು ಹಳದಿ ಬಣ್ಣಕ್ಕೆ ತಿರುಗಿದ್ದವು. ರಂಗನಿಗೆ ಗಾಬರಿ ಅನಿಸಿತು. ಅದ್ಯಾವುದೋ ದೊಡ್ಡ ಜಡ್ಡು ಇದೆ ಎಂದು ಭಾವಿಸಿದ. ರಾತ್ರಿ ಡಾಕ್ಟರು ಹೇಳಿದ ಮಾತು ನೆಪ್ಪಾಗಿ ಇದು ಗುಳಿಗೆ ಮಹಿಮೆ ಎಂದುಕೊಂಡು ನಿರಮ್ಮಳನಾದ.
ಈಗ ತುಸು ಜ್ವರ ಕಡಿಮೆಯಾಗಿ ಮೈ ಹಗುರ ಅನಿಸತೊಡಗಿತ್ತು. ಮನಿ ಮುಂದೆ ಲೈಟಿನ ಕಂಬಕ್ಕಿಂತ ಎತ್ತರ ಬೆಳೆದು ನಿಂತಿದ್ದ ಬೇನಗಿಡದ ಕೊಂಗಲಿ ಮುರಕೊಂಡು ಹಲ್ಲು ತಿಕ್ಕಿದ. ಅವ್ವ ಕಾಸಿ ಕೊಟ್ಟ ಡಿಕಾಸಿ ಚಾ ಕುಡಿದ. ಬ್ಯಾರೆ ಕೆಲಸ ಇಲ್ಲದಂತಾಗಿ ಮನಿ ಕಟ್ಟಿ ಮ್ಯಾಲೆ ಕುಂತು ಆ ಕಡೆ ಈ ಕಡೆ ಹೋಗರ್ನ ಬರೋರ್ನ ಕಣ್ಣು ತುಂಬಿಕೊಂಡು, ಅವರ ಬಟ್ಟೆಬರೆ ದಿಟ್ಟಿಸಿ ವಿಸ್ಮಯಗೊಳ್ಳುತ್ತಾ ಕುಳಿತ.
ಕಾಲೇಜಿಗೆ ಹೊರಟಿದ್ದ ಹುಡುಗಿಯನ್ನು ದಿಟ್ಟಿಸಿದ. ಅದು ಚಿಕ್ಕವಳಿದ್ದಾಗಿ ಎತ್ತಿ ಆಡಿಸಿ, ಗಲ್ಲಕ್ಕೆ ಬೆಲ್ಲ ಕೊಡುತ್ತಿದ್ದ ಮಗ್ಗುಲ ಮನೆಯ ಮಂಜುಳಾ. ಆಕೆಯನ್ನು ನೋಡಿ ತುಸು ಹೊತ್ತು ಕಣ್ಣಿಗೆ ಚಕ್ರ ಬಂದಾಗಾತು. ಮೈ ಕೈ ತುಂಬಾ ಹರೆಯ ತುಂಬಿಕೊಂಡು, ನೀಟಾಗಿ ಬೈತಲೆ ತಕ್ಕೊಂಡು ಜೋಡು ಜಡೆ ಬಿಟ್ಟಿದ್ದ, ಕಡು ನೀಲಿ ಚೂಡಿದಾರ ಧರಿಸಿದ್ದ ಮಂಜುಳಾಳನ್ನು ಮತ್ತೆ ಮತ್ತೆ ನೋಡಬೇಕೆನಿಸಿತು.
ಮಾಮ ಎಂದು ಬೆನ್ನು ಬೀಳುತ್ತಿದ್ದ ಹುಡುಗಿ ಈಗ ಕ್ಯಾರೆ ಎನ್ನದೆ ಅಪರಿಚಿತಳಂತೆ ಹೋಗುತ್ತಿರುವುದನ್ನು ನೋಡಿ ಸೋಜಿಗವೆನಿಸಿತು. ಕುರಿ ಮೇಸಲು ಗುಡ್ಡಕ್ಕೆ ಹೋದಾಗ ಅಲ್ಲಿಗೆ ಕಟ್ಟಿಗೆಗೆ ಬರುತ್ತಿದ್ದ ದಾವಣಿ ಲಂಗದ ಲಂಬಾಣಿ ಹುಡುಗಿಯರನ್ನು ಮಾತ್ರ ನೋಡಿದ್ದ ರಂಗನಿಗೆ ಮಂಜುಳಾ ಜಾತ್ರೆಯಲ್ಲಿ ಆಡುತ್ತಿದ್ದ ನಾಟಕದ ಹುಡುಗಿಯಂತೆ ಮೋಹಕವಾಗಿ ತೋರಿದಳು.
ಅವಳ ಹಿಂದೆ ತಾನು ಬಸ್ಸ್ಟಾಂಡ್ ಕಡೆ ಹೋದ. ಅಲ್ಲಿ ಕಾಲೇಜಿಗೆ ಹೋರಡಲು ಜಮೆಯಾಗಿದ್ದ ಹುಡುಗ, ಹುಡುಗಿಯರ ದೊಡ್ಡ ಗುಂಪು ನೆರೆದಿತ್ತು. ರಂಗನಿಗೆ ತಾನು ಅದ್ಯಾವುದೋ ಮಾಯಕದ ಜಗತ್ತಿನೊಳಗೆ ಬಂದಿರುವ ಡೌಟು ಕಾಡಿತು. ಹುಡುಗಿಯರ ಗುಂಪು ದಿಟ್ಟಿಸಿದ. ಜಾತ್ರೆಯೊಳಗಿನ ತರಹೇವಾರಿ ಬಣ್ಣದ ಗೊಂಬೆಗಳಂತೆ ಕಂಡರು. ಬಣ್ಣ ಮೆತ್ತಿಕೊಂಡು ರಂಗುಗೊಂಡಿದ್ದ ಮೋಹಕ ತುಟಿ, ಅವರ ಕಣ್ಣೊಳಗಿನ ಬುಡ್ಡಿ ಚಿಮಣಿಯ ಬೆಳಕು, ಚೂಡಿದಾರದ ಎದೆಗೆ ಒದೆಯುತ್ತಿರುವ ಮೊಲೆ ರಂಗನೊಳಗೆ ಹಲಗೆ ಬಾರಿಸತೊಡಗಿದ್ದವು.
ರಂಗನ ಮಗ್ಗುಲ ನಿಂತಿದ್ದ ಕಾಲೇಜು ಹುಡುಗನೊಬ್ಬ ಮೊಬೈಲಿನ ವಿಡಿಯೋ ದಿಟ್ಟಿಸತೊಡಗಿದ್ದ. ರಂಗ ಅಚ್ಚರಿಗೊಂಡ. ಅವನೊಳಗೆ ಹುಚ್ಚಾಳಂಬೆಯಂತೆ ಪುದು ಪುದು ನೂರೆಂಟು ಪ್ರಶ್ನೆಗಳು ಎದ್ದವು. ಜೇಬಿನಲ್ಲಿಟ್ಟುಕೊಳ್ಳುವ ಟಿ.ವಿ. ಎಂದು ಭಾವಿಸಿ ಆ ಹುಡುಗನನ್ನು, ಮೊಬೈಲನ್ನು ಇನ್ನಿಲ್ಲದ ಕೂತುಹಲದಿಂದ ದಿಟ್ಟಿಸತೊಡಗಿದ.
ಕನ್ನಡ ಸಾಲೆಯ ಟೀಚರು ನಡಿಗೆಗೆ ಅವಸರ ತುಂಬಿ ರಂಗನ ಮುಂದೆ ಸುಳಿದು ಬಸ್ ಹತ್ತಲು ಹೋದರು. ಆ ಟೀಚರ್ ಮೈಯಿಂದ ಹೊರಟ ಸೇಂಟಿನ ಘಮ ರಂಗನ ಮೂಗಿನ ಹೊಳ್ಳೆ ಅರಳಿಸಿ ಸೋಜಿಗಗೊಂಡ. ಕುರಿ ಉಚ್ಚೆಯ ಗಬ್ಬು ನಾತಕ್ಕೆ ಒಗ್ಗಿ ಹೋಗಿದ್ದ ರಂಗ ಟೀಚರ್ ಮೈಯಿಂದ ಬಂದ ಘಮ ಅವರೊಳಗೆ ಅದ್ಹೇಗೆ ಬಂದಿರಬಹುದು ಎಂದು ಊಹಿಸಲು ಅಸಾಧ್ಯವೆನಿಸಿ ಮನೆಯ ದಾರಿ ತುಳಿದ.
******
ಊರಿಗೆ ಹೋಗಿ ಬಂದಾಗಿನಿಂದ ಕುರಿ ಕಾಯುವಾಗ ರಂಗನ ಮನಸು ಮೊದಲಿನಂತಿರದೆ ಅದ್ಯಾಕೊ ಒಳಗೊಳಗೆ ಭೋರಿಟ್ಟು ಅಳುತ್ತಿದೆ. ಮುಂಜಾನೆಯಾದರೆ ಸಾಕು. ಬಸ್ಸ್ಟ್ಯಾಂಡಿನ ಕಡೆ ಹೋಗಬೇಕೆನಿಸುತ್ತದೆ. ಬಣ್ಣದ ಗೊಂಬೆಯಂತ ಹುಡುಗಿಯರು, ಜೇಬಿನಲ್ಲಿಟ್ಟುಕೊಳ್ಳುವ ಟಿವಿ, ಟೀಚರ್ ಮೈ ಘಮ, ತಾನು ಗಲ್ಲಕ್ಕೆ ಬೆಲ್ಲ ಕೊಟ್ಟಿದ್ದ ಹುಡುಗಿ ಕನಸಾಗಿ ಕಾಡಿ ಜೀವ ಹಿಂಡತೊಡಗಿದ್ದವು.
*****
ಹಟ್ಟಿಯ ಸುತ್ತ ಕತ್ತಲು ಕಳ್ಳಬೆಕ್ಕಿನಂತೆ ಹೆಜ್ಜೆ ಇಡತೊಡಗಿತ್ತು. ರಂಗ ಮೈ ಮುಟ್ಟಿ ನೋಡಿಕೊಂಡ. ಜ್ವರ ಬಂದಂತೆನಿಸಿತು. ಖುಷಿಯಾಗಿ ಕೌದಿ ಹೊದ್ದು, ಕುರಿ ಮೇಸಲು ಹೋದ ಜೊತೆಗಾರರು ಬರುವ ದಾರಿ ನಿರುಕಿಸುತ್ತ ಕುಳಿತ.
– ಟಿ.ಎಸ್.ಗೊರವರ