ನಾವು ಯಾರದೋ ಉಪಕಾರಕ್ಕಾಗಿ ಬದುಕೋದಿಲ್ಲ. ಯಾರು ಕೂಡಾ. ನಾವು ಹುಟ್ಟಿದ್ದು ನಾವು ಬದುಕಲಿಕ್ಕೆ ಮತ್ತು ನಮ್ಮ ಸಾವನ್ನು ನಾವೇ ಸಾಯಲಿಕ್ಕೆ. ಪ್ರೀತಿಸುವುದು ಕೂಡ ಆ ಪ್ರೀತಿ ನಮ್ಮಲ್ಲಿ ಉಂಟು ಮಾಡುವ ಹಿತಾನುಭವವನ್ನ ಪಡೆಯಲಿಕ್ಕಷ್ಟೆ.
ಬಹಳ ಹಿಂದೆ ಒಂದು ಕಥೆ ಓದಿದ್ದ ನೆನಪು.
ಒಂದು ಆಚಾರವಂತ ಕುಟುಂಬದಲ್ಲಿ, ಆ ಮನೆಯ ಗೃಹಿಣಿಯ ದೇಹಾಂತವಾಗುತ್ತೆ. ಗಂಭೀರೆ, ಜಾಣೆಯಾದ ಸುಸಂಸ್ಕೃತ ಮಗಳು ತೀವ್ರ ನೋವಿಗೆ ಒಳಗಾಗ್ತಾಳೆ. ಅವಳಪ್ಪ ದಿನಾ ಅವಳನ್ನ ಕೂರಿಸಿಕೊಂಡು ಭಗವದ್ಗೀತೆ ಓದಿ ಅದರ ಅರ್ಥವಿವರಣೆ ಮಾಡ್ತಾರೆ. ಅಮ್ಮನ್ನ ಕಳಕೊಂಡ ಮಗಳಿಗೆ ದೇಹಾತ್ಮಗಳ ಸಂಗತಿಯನ್ನೆಲ್ಲ ಬಿಡಿಸಿಬಿಡಿಸಿ ಹೇಳ್ತಾನೆ ಅಪ್ಪ. ಅದೇ ಸಮಯಕ್ಕೆ ಅವಳಿಗೆ ಪರಿಚಯವಾಗುವ ಯುವಕ, ಆಕೆಯ ನೋವಿಗೆ ಸ್ಪಂದಿಸ್ತಾನೆ. ಜೊತೆಯಾಗ್ತಾನೆ, ಅವಳ ನಗುವಾಗ್ತಾನೆ. ಅಮ್ಮ ಸತ್ತ ವರ್ಷದೊಳಗೆ ಅವರಿಬ್ಬರು ಮದುವೆಯಾಗ್ತಾರೆ ಅಂತೇನೋ ಮುಗಿದಿತ್ತಿರಬೇಕು. ಈ ಪ್ರಕ್ರಿಯೆಯಲ್ಲಿ ಶಾಸ್ತ್ರಿಗಳು ಮಗಳ ನಡತೆ ಬಗ್ಗೆ ಅಚ್ಚರಿಯನ್ನೂ ಗಾಬರಿಯನ್ನೂ ಪಟ್ಟಿದ್ದರು ಅನ್ನೋದು ಕಥೆಯೊಳಗಿದೆ. ಹಾಗೇ ಆ ಹುಡುಗ ಬೇರೆ ಜಾತಿಯವನಿರಬೇಕು.
ಕೆಲ ಸಲ ಹೀಗಾಗತ್ತೆ. ಅದು ಕಥೆಯೋ ಸಿನೆಮಾವೋ… ನಮ್ಮನ್ನ ಯಾವ ಅಂಶ ಸೆಳೆಯುತ್ತೋ ಅದು ಕಣ್ಣಿಗೆ ಕಟ್ಟಿದ ಹಾಗೆ ಉಳಿದುಕೊಳ್ಳುತ್ತೆ. ಮಿಕ್ಕಂತೆ ಯಾವ ವಿವರವೂ ನೆನಪಿರೋದಿಲ್ಲ. ಈ ಕಥೆಯ ಮಟ್ಟಿಗೆ ನನ್ನ ನೆನಪಲ್ಲಿ ಉಳಿದುಹೋಗಿದ್ದು, ಕಳಕೊಂಡ ನೋವಲ್ಲಿ ನರಳುವಾಗ ಭಗವದ್ಗೀತೆ ಓದುವ ಅಪ್ಪ ಮತ್ತು ಆ ಕ್ಷಣದ ನಗುವಾಗಿ ಒದಗಿದ ಯುವಕ.
~
ಯಾರಾದರೂ ಸತ್ತಾಗ ನಾವ್ಯಾಕೆ ಅಳ್ತೀವಿ? ಅವರ ಅನುಪಸ್ಥಿತಿ ನಮಗೆ ನೋವು ತರುವುದರಿಂದ. ನಾವು ಮಿಸ್ ಮಾಡ್ಕೊಳ್ಳುವುದರಿಂದಲೇ ಹೊರತು ಸತ್ತವರಿಗಾಗಿ ಅಲ್ಲ. ಇಲ್ಲವಾದವರು ಇದ್ದಿದ್ದರೆ ಏನೇನೋ ಮಾಡ್ತಿದ್ದರು, ಇಲ್ಲವಾಗಿಬಿಟ್ಟಿದ್ದಾರೆ – ಸರಿ. ಇಲ್ಲವಾಗಿರುವ ವಸ್ತುವಿಗೆ ನೋವೂ ಇರೋದಿಲ್ಲ. ನಾವು ಅಳೋದು, ಆ ಖಾಲಿ ನಮ್ಮನ್ನು ಕಾಡುವುದರಿಂದಲಷ್ಟೆ. ನಮ್ಮ ಮನೋಬುದ್ಧಿಗಳಲ್ಲಿ ಒಂದು ಕುಳಿ ಬೀಳುತ್ತೆ. ಅದನ್ನ ಹೊಸ ನೀರು, ಹೊಸ ಮಣ್ಣು ಭರಿಸುವತನಕ ದುಃಖ ನಮ್ಮನ್ನ ಕಾಡುತ್ತೆ. ಸತ್ತವರು ವೈತರಣಿ ದಾಟುತ್ತಾರೋ ಇಲ್ಲವೋ… ಅವರ ಆತ್ಮ ಮುಕ್ತಿ ಪಡೆಯುತ್ತೋ ಇಲ್ಲವೋ… ವಿಷಯ ಅದಲ್ಲ. “ಅಂಗಿ ಬಿಚ್ಚಿ ಬಿಸಾಕಿದ ಹಾಗೆ ಆತ್ಮವು ದೇಹವನ್ನ ಬಿಸುಟು ಹೊರಡುತ್ತದೆ” – ಭಗವದ್ಗೀತೆಯ ಪಾಠ. ಈ ತಿಳಿವು ನಮ್ಮ ನೋವನ್ನು ಉಪಶಮನ ಮಾಡೋದಿಲ್ಲ. ಯಾಕಂದರೆ ನಾವು ಬಿಸಾಡಲ್ಪಟ್ಟ ಅಂಗಿಗಾಗಿ ಅಳುತ್ತಿಲ್ಲ. ನಾವು ಅಳ್ತಿರೋದು ಆ ಅಂಗಿ ತೊಟ್ಟು ನಮ್ಮೆದುರು ನಡೆದಾಡ್ತಿದ್ದ ಆತ್ಮ ಇನ್ನು ನಮಗೆ ಕಾಣಿಸೋದಿಲ್ಲವಲ್ಲ ಅಂತ. ಇಲ್ಲಿ ಸಾಹಚರ್ಯ ಕಳಕೊಂಡ ನಮ್ಮ ಬಗೆಗಷ್ಟೆ ನಮ್ಮ ಅನುಕಂಪ.
~
ಆ ಹುಡುಗಿಗೆ ಅವಳಮ್ಮ ಗೆಳತಿಯಂತಿದ್ದಳು. ಅವಳ ವಿಸ್ತರಣೆಯಂತಿದ್ದಳು. ಅವಳ ಜೀವನದಲ್ಲಿ ಕಂಡ ಏಕೈಕ ಆಪ್ತಳಾಗಿದ್ದಳು. ಅವಳು ಇಲ್ಲವಾದಾಗ ಉಂಟಾದ ದೊಡ್ಡ ಕೊರತೆಯನ್ನು ತಿಳಿವು ತುಂಬಲಿಲ್ಲ. ಸತ್ತವರು ಮತ್ತೆ ಬರೋದಿಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳದವರು ಬಹಳ ಕಡಿಮೆ ಜನ. ಮಿತಿಮೀರಿದ ವ್ಯಾಮೋಹದಿಂದ ಮಾನಸಿಕ ಸ್ವಾಸ್ಥ್ಯ ಕಳಕೊಂಡವರಷ್ಟೆ ಸತ್ತವರು ಮತ್ತೆ ಬರುತ್ತಾರೆ ಅಂದುಕೊಳ್ಳೋದು. ಅಂಥವರಷ್ಟೆ, ಹಾಗೆ ಬರಲಿ ಅನ್ನುವ ನಿರೀಕ್ಷೆ ಇಟ್ಟುಕೊಳ್ಳೋದು…. ಇಲ್ಲವಾದರೆ ಬುದ್ಧ ಗೋತಮಿಗೆ ಸಾಸಿವೆ ತರಲು ಹೇಳ್ತಿರಲಿಲ್ಲ. ಮಗನನ್ನ ಬದುಕಿಸಿಕೊಡು ಅಂತ ಬಂದವಳಿಗೆ ಬುದ್ಧ ಧಮ್ಮೋಪದೇಶ ಮಾಡುತ್ತ ಕೂರಬಹುದಿತ್ತು. ಆದರೆ ಆತ ಆಕೆಗೂ ಗೊತ್ತಿರುವ ಸಂಗತಿಯನ್ನೇ ಸ್ವತಃ ಕಂಡುಕೊಳ್ಳಲು ಬಿಟ್ಟ. ಅವಳ ಮನೋಸ್ವಾಸ್ಥ್ಯವನ್ನ ಸರಿಪಡಿಸುವುದು ಮುಖ್ಯವಾಗಿತ್ತು ಬುದ್ಧನಿಗೆ.
ಪಟಾಚಾರಾ ತನ್ನ ಗಂಡನನ್ನೂ ಇಬ್ಬರು ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡಳು. ಅವರು ಅವಳ ಜೀವನದ ಸಂತಸವಾಗಿದ್ದವರು. ಅಪಘಾತಗಳಲ್ಲಿ ಆ ಮೂವರನ್ನೂ ಕಳಕೊಂಡ ಪಟಾಚಾರಾ ಕೂಡ ಬುದ್ಧನ ಬಳಿ ಬಂದಳು. ಅವಳು ಅವರನ್ನು ಬದುಕಿಸಿಕೊಡೆಂದು ಕೇಳಲಿಲ್ಲ. ಅವರೆಲ್ಲರ ಅಗಲಿಕೆಯಿಂದ ಆಗಿರುವ ನೋವನ್ನು ಭರಿಸಿಕೊಡೆಂದು ಬಂದಳು. ಬುದ್ಧ ಅವಳಿಗೆ ನಿಸ್ಸಂಗತ್ವವನ್ನು ಬೋಧಿಸಿದ. ಆಕೆ ತನ್ನೊಂದಿಗೆ ತಾನಿರುವುದನ್ನು ಕಲಿತುಕೊಂಡಳು, ಬಿಕ್ಖುಣಿಯಾದಳು.
~
ನಾವು ಯಾರದೋ ಉಪಕಾರಕ್ಕಾಗಿ ಬದುಕೋದಿಲ್ಲ. ಯಾರು ಕೂಡಾ. ನಾವು ಹುಟ್ಟಿದ್ದು ನಾವು ಬದುಕಲಿಕ್ಕೆ ಮತ್ತು ನಮ್ಮ ಸಾವನ್ನು ನಾವೇ ಸಾಯಲಿಕ್ಕೆ. ನಾವು ಪ್ರೀತಿಸುವುದು ಕೂಡ ಆ ಪ್ರೀತಿ ನಮ್ಮಲ್ಲಿ ಉಂಟು ಮಾಡುವ ಹಿತಾನುಭವವನ್ನ ಪಡೆಯಲಿಕ್ಕೆ. ಅಮ್ಮ ಮಗುವನ್ನ ಪ್ರೀತಿಸೋದು ಕೂಡ ತಾಯ್ತನದ ಅನುಭೂತಿಗಾಗಿಯೇ ಹೊರತು ಅದು ಕೂಡ ನಿಸ್ವಾರ್ಥವಲ್ಲ. ತನ್ನ ನಿರಂತರತೆಯಾಗಿರುವ ಕಾರಣದಿಂದಲೇ ತಾಯಿ ತನ್ನ ಮಗುವನ್ನ ಪ್ರೀತಿಸ್ತಾಳೆ. ವಾತ್ಸಲ್ಯದ ಆನಂದ ಅವಳಿಗೆ ಲಭಿಸುತ್ತದೆ. ಆ ಅನುಭೂತಿಗಾಗಿ ಅವಳು ತ್ಯಾಗದ ಔನ್ನತ್ಯವನ್ನೂ ಸುಲಭದಲ್ಲಿ ಸಾಧಿಸಬಲ್ಲವಳಾಗುತ್ತಾಳೆ. ಮಗು ತಾಯಿಗೆ ನೀಡುವ ಸಂತೋಷ ಅಷ್ಟು ಉನ್ನತವಾದದ್ದು.
ನಮ್ಮ ಮೋಹ – ನಿರ್ಮೋಹಗಳು ನಮ್ಮ ಸಂತೋಷದ ಸಲುವಾಗಿಯೇ ನಮ್ಮಲ್ಲಿ ಬೆಳೆದುಕೊಂಡಿರುತ್ತವೆ. ಸಂತರ ಸಾಲಿನ ಬಹುತೇಕರು ಸಂಸಾರ ಬಿಟ್ಟು ಹೊರಡುವಾಗ ದುಃಖಿಸಲಿಲ್ಲ. ಯಾಕಂದರೆ ಅವರು ತಮ್ಮನ್ನು (ತಮ್ಮ ಸ್ವಯಂ ಅನ್ನು, ಆತ್ಮವನ್ನು) ಕುಟುಂಬದ ಜನರಿಗಿಂತ ಹೆಚ್ಚು ಪ್ರೀತಿಸುತ್ತಿದ್ದರು. ಅವರು ದೃಗ್ಗೋಚರ ದೇಹಕ್ಕಿಂತ ಅದರೊಳಗಿನ ಸೂಕ್ಷ್ಮವನ್ನು ಹೆಚ್ಚು ಪ್ರೀತಿಸುತ್ತಿದ್ದರು. ಬಿಟ್ಟು ಬಂದ ಮಗು, ಹೆಂಡತಿ ಮೊದಲಾದವರ ಮೇಲೆ ಪ್ರೀತಿ ಕಡಿಮೆಯಾಯ್ತೆಂದಲ್ಲ, ಅಂಥಾ ಸಂತರು ಆ ಎಲ್ಲ ದೇಹಗಳೊಳಗಿನ ಸತ್ವವನ್ನು ಪ್ರೀತಿಸ್ತಿದ್ದರು. ಅದರಲ್ಲಿ ಅವರಿಗೆ ಹೆಚ್ಚಿನ ಆನಂದ ದೊರೆಯುತ್ತಿತ್ತು.
ತ್ಯಾಗ, ನಿರ್ಲಿಪ್ತಿ, ವೈರಾಗ್ಯಗಳು ಕೂಡ ಸ್ವಯಂನ ಆನಂದಕ್ಕಾಗಿಯೇ ಇವೆ. ಜ್ಞಾನೋದಯವನ್ನ ಪಡೆಯೋದು ಅಂದರೆ ದಿವ್ಯಾನಂದದಲ್ಲಿ ತೇಲೋದು ಅನ್ನುತ್ತಾರೆ ಬಲ್ಲವರು. ಜ್ಞಾನೋದಯ ಕೂಡ, ಬ್ರಹ್ಮದ ಅರಿವು ಪಡೆಯುವ ಪ್ರಕ್ರಿಯೆ ಕೂಡ ನಮ್ಮನ್ನ ತಲುಪಿಸೋದು ನಾವು ಕುಂದಿಲ್ಲದ ಆನಂದದ ರುಚಿ ಸವಿಯಲಿಕ್ಕೇ ಅಂತಾದ ಮೇಲೆ, ನಮ್ಮ ಪ್ರೀತಿ ಪ್ರೇಮಗಳನ್ನ ನಿಸ್ವಾರ್ಥವೆಂದು ಸಾಧಿಸಿಕೊಳ್ಳುವ ಹಠ ಯಾಕೆ?
~
ಎಲ್ಲವೂ ಅಷ್ಟೇ. ನಮಗೆ ಬೇಕಾದಾಗ ಮಾತ್ರ ನಾವದನ್ನ ಮಾಡ್ತೀವಿ. ಮೇಲನೋಟಕ್ಕೆ, ಯಾರದೋ ಉಪಕಾರಕ್ಕೆ ನಾವು ನಮಗಿಷ್ಟವಿಲ್ಲದ ಕೆಲಸ ಮಾಡಿದಂತೆ ಕಂಡರೂ, ಹಾಗೆ ನಮಗಿಷ್ಟವಿಲ್ಲದ್ದನ್ನು ಮಾಡುವ ಮೂಲಕ ಅವರ ಮೆಚ್ಚುಗೆಗೋ/ ಕೃಪೆಗೋ/ ಪ್ರೀತಿಗೋ ಪಾತ್ರರಾಗುವ ಲಾಭದಿಂದಲೇ ನಾವದನ್ನ ಮಾಡಿರ್ತೀವಿ. ತಾನು ಬಯಸದ ಯಾವ ಕೆಲಸವನ್ನೂ ಒಂದು ಕೀಟ ಕೂಡ ಮಾಡುವುದಿಲ್ಲ. ಹೀಗಿರುವಾಗ ಮನುಷ್ಯ ತಾನೆ ಹೊರತು ಹೇಗಾದಾನು?
ಪರಸ್ಪರ ಪ್ರೀತಿ, ಅವರವರ ಖುಷಿಗಾಗಿಯೇ. ಹೀಗಿರುವಾಗ ಪ್ರೇಮಿ ಹೀಗೇ ಇರಬೇಕು, ಹಾಗೇ ಇರಬೇಕೆಂಬ ತಾಕೀತುಗಳು ಸುಖದ ಹಾಲಿಗೆ ಹಿಂಡುವ ಹುಳಿಯಂತಾಗುತ್ತದೆ ಅಷ್ಟೆ. “ನಿನ್ನನ್ನ ಪ್ರೀತಿಸೋದು ನನ್ನ ಖುಷಿಗಾಗಿ. ನನ್ನ ಖುಷಿ ಉಳಿಸಲು ನೀನು ನನ್ನ ಬಯಕೆಯಂತಿರಬೇಕು” ಅಂತ ಬಯಸತೊಡಗಿದರೆ, ಆ ಕ್ಷಣದಿಂದಲೇ ನಮ್ಮ ಪ್ರೀತಿಸುವ ಆನಂದ ಕಳೆಯುತ್ತಾ ಹೋಗುತ್ತದೆ. ಇದು ಎಲ್ಲ ಸಂಬಂಧಗಳಿಗೂ ಅನ್ವಯ.
ಸ್ವಾರ್ಥ, ಜೀವನದ ಪರಮ ಸತ್ಯ. ಆದರೆ ಅದು ಮತ್ತೊಬ್ಬರ ಸ್ವಾರ್ಥಕ್ಕೆ ಧಕ್ಕೆಯಂತೆ ಇರಬಾರದು. ಎಲ್ಲ ಸಾತ್ವಿಕ ಸ್ವಾರ್ಥಗಳೂ ಜಗತ್ತಿನ ಖುಷಿಯಲ್ಲಿ ಸ್ವಂತದ ಖುಷಿಯನ್ನ ಕಾಣ್ತವೆ ಮತ್ತು ಆ ಖುಷಿಯ ಅನುಭವಕ್ಕಾಗಿ ತ್ಯಾಗಕ್ಕೆ ಮುಂದಾಗುತ್ತವೆ. ಎಲ್ಲ ತಾಮಸಿಕ ಸ್ವಾರ್ಥಗಳು ತನ್ನ ಖುಷಿಯೇ ಜಗತ್ತಿನ ಖುಷಿಯಾಗಬೇಕೆಂದು ಬಯಸುತ್ತಾ, ಅದಕ್ಕೆ ಜಗತ್ತಿನ ಬಲಿ ಕೇಳ್ತವೆ. ಪ್ರೇಮದಲ್ಲೂ ಹೀಗೇನೇ….
~
ಅಂದಹಾಗೆ;
ನಾವು
ಕಳೆದುಹೋದವರನ್ನ
ಹೆಚ್ಚು ಪ್ರೀತಿಸೋದು
ಅವರು
ಮತ್ತೆ ಸಿಗೋದಿಲ್ಲೆಂಬ
ನೋವಿನಿಂದಲಾ?
ಖಾತ್ರಿಯಿಂದಲಾ!?
– ನಮ್ಮ ನಮ್ಮ ನಿಜ, ನಮನಮಗೆ ಗೊತ್ತು!