ಊರು ಸುಟ್ಟರೂ ಹನುಮಪ್ಪ ಹೊರಗೆ! ~ ಹನುಮಂತ ಹಾಲಿಗೇರಿ ಹೊಸ ನಾಟಕ…

“ರವೀಂದ್ರ ಕಲಾಕ್ಷೇತ್ರ 150 ಸುವರ್ಣ ಸಂಭ್ರಮ ಸಮಿತಿಯವರು ನಾಟಕ ಸ್ಪರ್ಧೆ ಏರ್ಪಡಿಸಿದ್ದನ್ನು ಕೇಳಿ ಪಟ್ಟಾಗಿ ಕುಳಿತು ಒಂದು ವಾರದಲ್ಲಿಯೇ ಈ ನಾಟಕ ಬರೆದು ಪೋಸ್ಟ್ ಮಾಡಿದ್ದೆ. ಆದರೆ, ಬರೆದಾದ ಮೇಲೆ ಸುಮ್ಮನಿರಲಿಕ್ಕಾಗದೆ ಓದಿಗಾಗಿ ಗೆಳೆಯ ಮಹಾದೇವ ಹಡಪದ ಅವರಿಗೆ ಕಳಿಸಿದ್ದೆ. ಮಹಾದೇವ ಓದಿ ಇಷ್ಟಪಟ್ಟು ತಮ್ಮ ಆಟಮಾಟ ತಂಡದಿಂದಲೇ ಪ್ರದರ್ಶಿಸಲು ಏರ್ಪಾಟುಮಾಡಿಕೊಂಡಿದ್ದರು. ಇಂದು ನಾಟಕ ಗದಗಿನಲ್ಲಿ 12ನೆ ಪ್ರದರ್ಶನ ಕಾಣುತ್ತಿರುವ ಸಂದ‍ರ್ಭದಲ್ಲಿಯೇ ನಾಟಕ ಬೆಂಗ್ಳೂರು ಸಮಿತಿಯ ರಂಗಕರ್ಮಿ ಶಶಿಧರ ಭಾರಿಘಾಟ್‍ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸಮಿತಿಯವರೆ ನಾಟಕ ಕೃತಿಯನ್ನು ಪ್ರಕಟಿಸಿ ಬಿಡುಗಡೆ ಮಾಡುತ್ತಿರುವುದರಿಂದ ನನ್ನಿಂದ ಅತ್ಯಂತ ಕಡಿಮೆ ಶ್ರಮ ಮತ್ತು ಸಮ ತಿಂದು ಹೊರಬರುತ್ತಿರು ಕೃತಿ ಇದು” – ಎನ್ನುತ್ತಾರೆ ಹನುಮಂತ ಹಾಲಿಗೇರಿ. ಈ ನಾಟಕದ ಎರಡು ದೃಶ್ಯಗಳು ನಿಮಗಾಗಿ…. ಉಳಿದವನ್ನ ಮಾತ್ರ ನೀವೇ ನೋಡಿ ಆನಂದಿಸಬೇಕು!

 

ನಾಟಕದ ಒಂದು ನೋಟ

ನಾಟಕದ ಒಂದು ನೋಟ

ದೃಶ್ಯ: ೧
(ಬೆಳದಿಂಗಳ ರಾತ್ರಿ, ರಂಗಭೂ”ಯು ನಡು”ನ ಹನುಮನ ಮೂರ್ತಿಯ ಮೇಲೆ ನಿಧಾನಕ್ಕೆ ಬಿದ್ದು ಮೂರ್ತಿಯ ಮುಖ ಬೆಳಗುತ್ತದೆ. ಬೆಳಕು ಸ್ಪಷ್ಟಗೊಳ್ಳುತ್ತಾ ಹೋದಂತೆಲ್ಲ ಹನುಮನ ಮೂರ್ತಿಯ ಮುಖದಲ್ಲಿ ವ್ಯಂಗ್ಯ ಇದ್ದು ಇಲ್ಲದಂತೆ ಗೋಚರಿಸುತ್ತದೆ. ಅದರ ಪಕ್ಕದಲ್ಲಿರುವ ದೀಪಸ್ಥಂಭದ ಮೇಲೆ ದೀಪ ಉರಿತಾ ಇದೆ.
ದೇವಸ್ಥಾನದ ಮುಂದೆ ಸುತ್ತಮುತ್ತ ಯಾವದೋ ಕಾಲದಲ್ಲಿ ಕಟ್ಟಿದ ಮನೆಗಳ ಪಳಿಯುಳಿಕೆಗಳು ಕಲಾಚಿತ್ರಗಳಂತೆ ಕಾಣುತ್ತಿವೆ. ಎಡಗಡೆಗೆ ಒಂದಿಷ್ಟು ಮನೆಗಳು, ಮನೆಗಳ ಮುಂದೆ ಆಲದ ಮರದ ಕಟ್ಟೆ. ಮರಕ್ಕೆ ವಜ್ರಮಟ್ಟಿ ಎಂಬ ಬೋರ್ಡು ತೂಗು ಹಾಕಲಾಗಿದೆ. ದೇವಸ್ಥಾನದ ಬಲಗಡೆ ಅದೇ ತರಹದ ಒಂದಿಷ್ಟು ಮನೆಗಳು. ಆಲದ ಕಟ್ಟೆ. ಮರಕ್ಕೆ ಧರೆಗಟ್ಟಿ ಎಂಬ ಬೋರ್ಡು.
ದೂರದಲ್ಲೆಲ್ಲೋ ಟ್ಯಾಕ್ಟರ್ ಬಂದು ನಿಂತ ಶಬ್ದ ಕೇಳುತ್ತದೆ. ಒಬ್ಬ ಕಂಬಳಿ ಹೊದ್ದು ಅತ್ತಿತ್ತ ನೋಡುತ್ತಾ ಕಳ್ಳಹೆಜ್ಜೆ ಇಟ್ಟು ರಂಗಭೂಮಿ ಪ್ರವೇಶಿಸುತ್ತಾನೆ. ಗುಡಿಯ ಅಕ್ಕಪಕ್ಕ ಸ್ವಲ್ಪ ದೂರ ಗಮನಿಸುತ್ತಾನೆ. ತೆಂಗಿನ ಗಿಡ ಏರಿದಂತೆ ಸ್ವಲ್ಪ ದೂರ ಸ್ಥಂಭ ಏರಿ ಯಾರೂ ಇಲ್ಲ ಎಂದು ಮನಗಂಡು ಜೋರಾಗಿ ಸಿಳ್ಳು ಹೊಡೆಯುತ್ತಾನೆ.
ಕಂಬಳಿ ಹೊದ್ದ ಎಳೆಂಟು ಜನ ಅವಸರಿಸಿ ಕಳ್ಳಹೆಜ್ಜೆ ಇಡುತ್ತಾ ಬರುತ್ತಾರೆ. ಅವರಲ್ಲೊಬ್ಬ ದೇವಸ್ಥಾನದ ಬಾಗಿಲು ತೆರೆದು ಊದುಬತ್ತಿ ಬೆಳಗಿ ಎನೇನೋ ಮಂತ್ರ ಫಠಿಸುತ್ತಾ ಪೂಜೆ ಮಾಡುತ್ತಾನೆ. ಅದಾದ ಮೇಲೆ ಮೂರ್ತಿ ಸ್ಥಾಪಿಸಿದ ಕಲ್ಲುಮಂಟಪವನ್ನು ಹಾರೆ ಗುದ್ದಲಿಗಳಿಂದ ಹಡ್ಡುತ್ತಾರೆ, ‘ಸಾವಕಾಶ, ಮೂರ್ತಿ ಮುಕ್ಕಮಾಡಬ್ಯಾಡ್ರಿ’ ಎಂಬ ಕಿವಿ ಮಾತುಗಳು ಕೇಳಿ ಬರುತ್ತವೆ. ಕೊನೆಗೊಮ್ಮೆ ಆ ನಿಶಬ್ದದಲ್ಲಿ ಜೈ ಶ್ರೀ ಹನುಮಾನ್ ಎಂಬ ಉದ್ಘೋಷದೊಂದಿಗೆ ಮೂರ್ತಿ ಮೇಲೇಳುತ್ತದೆ.
‘ಸಾವಕಾಶ ತುಗೊಂಡು ಬರ್ರಿ, ಅಲ್ಲಿ ಟ್ಯಾಕ್ಟರ್‍ನೊಳಗ ಇಡೋಣು’ ಅಂತ ಗುಂಪಿನಲ್ಲಿದ್ದ ಹಿರಿಕರು ಹೇಳುತ್ತಿರುವಾಗಲೇ ಜೈ ಹನುಮ ಜೈ ಜೈ ಹನುಮ ಎಂದುಕೊಳ್ಳುತ್ತಾ ಮೂರ್ತಿಯನ್ನು ಹೊತ್ತೊಯ್ಯುತ್ತಾರೆ. ಅವರು ಹೊತ್ತೊಯ್ದ ಸ್ವಲ್ಪ ಹೊತ್ತಿನಲ್ಲೆ ಟ್ರ್ಯಾಕ್ಟರ್ ಪ್ರಾರಂಭವಾದ ಶಬ್ದ ಕೇಳುತ್ತದೆ.
ನಿಧಾನಕ್ಕೆ ಗುಡಿಯ ಅಂಗಳದಲ್ಲಿ ಬೆಳಕು ಚಲ್ಲುತ್ತದೆ. ಅಲ್ಲೊಂದು ಗೋಣಿ ಚೀಲದ ಮೇಲೆ ಹುಚ್ಚಮಲ್ಲ ಮಲಗಿದ್ದಾನೆ. ದೇವರು ಕಳ್ಳತನವಾಗೋದನ್ನು ನೋಡಿ ಜೋರಾಗಿ ನಗುತ್ತಾನೆ.)

ಹುಚ್ಚಮಲ್ಲ: ಹಹ್ಹಹ್ಹಾ, ದೇವರು ನನ್ನ ಕಾಪಾಡುತಾನು ಅನ್ಕೊಂಡು ನಾನು ಇಲ್ಲಿ ಬಂದು ಮಲಕೋತಿದ್ದಿನಿ. ಈಗ ನೋಡಿದರ ದೇವರು ತನ್ನನ್ನು ತಾನ$ ಕಾಪಾಡಿಕೊಳ್ಳಲಿಲ್ಲ. ಅಂವನ್ನ ಹೊತ್ತುಗೊಂಡು ಹೋಗಿಬಿಟ್ರು. ಹುಚ್ಚ ಸೂಳಿ ಮಕ್ಳು, ದೇವರು ಸರ್ವ ಶಕ್ತ. ನಮ್ಮನ್ನೆಲ್ಲ ಕಾಪಾಡೋನು ಅಂತ ಏನೇನಾರ ಹೇಳ್ತಾರ. ಮತ್ ಅಂವನ ಕಳ್ಳತನ ಮಾಡಾತಾರ. ಇನ್ನ ನನ್ನನ್ನು ಯಾರು ಕಾಪಾಡೋರು, ಯಾರು ಕಾಪಾಡೋರು… (ಚೀರುತ್ತಾ ಓಡಿ ಹೋಗುವನು).

ದೃಶ್ಯ: ೨

(ನಿಧಾನಕ್ಕೆ ತೆರೆ ಕೆಂಪುಗಾಗುತ್ತಾ ಸೂರ್ಯನ ಉದಯವನ್ನು ಸಾರುತ್ತದೆ. ಹಕ್ಕಿಗಳ ಚಿಲಿಪಿಲಿ, ಅದರ “ಂದೆಯೇ “ಏಳು ಏಳಯ್ಯಾ ಶ್ರೀ ಮಾರುತೇಶಾ, ಶ್ರೀ ಹನುಮದೇವಾ ಏಳಯ್ಯಾ” ಎಂಬ ಹಾಡು ಕೇಳಿ ಬರುತ್ತದೆ. ವಜ್ರಗಟ್ಟಿಯಲ್ಲಿ ಮ”ಳೆಯರು ತಂಬಿಗೆ ತುಗೊಂಡು ಇದ್ದಿಲು ತಿಕ್ಕುತ್ತಾ ಹೊರಗಡೆ ಹೋಗುವರು, ಕೆಲವರು ಅಂಗಳ ಕಸ ಗೂಡಿಸುತ್ತಿರುವರು. ಎಳೆ ಮಕ್ಕಳು ನಿದ್ದೆಗಣ್ಣಲ್ಲಿ ಎದ್ದು ಉಚ್ಚೆ ಹೊಯ್ಯುತ್ತಿರುವರು. ಒಂದಿಷ್ಟು ಮಂದಿ ಅಂಗಳದಲ್ಲಿ ಉರಿ ಕಾಸಿಕೊಳ್ಳುತ್ತಿದ್ದಾರೆ.
ತೋಯ್ದ ಮೈಯಲ್ಲಿರುವ ಪೂಜಾರಿ ಹಿತ್ತಾಳೆ ಕೊಡ ಹೊತ್ತು ಮಂತ್ರ ಮಣಮಣಿಸುತ್ತಾ ಇವರ ನಡುವೆ ದಾರಿ ಮಾಡಿಕೊಂಡು ದೇವಸ್ಥಾನದ ಕಡೆ ಹೊಗುತ್ತಾನೆ. ದೇವಸ್ಥಾನದಲ್ಲಿ ದೇವರು ಇಲ್ಲದಿರುವುದು ಗಮನಕ್ಕೆ ಬಂದೊಡನೆ ಹೊತ್ತ ಕೊಡವನ್ನು ಒಗೆದು “ಗುಡಿಯಾನ ಹನುಮಪ್ಪ ಕಳುವಾಗ್ಯಾನಪೋ’ ಅಂತ ಜನರ ಮಧ್ಯೆ ಹಾಯ್ದು ಓಡಿಬರುತ್ತಾನೆ. ಜನರೂ ಅವನನ್ನು ಬೆನ್ನಟ್ಟುತ್ತಾರೆ. ಈ ಗುಂಪು ರಂಗಭೂಮಿಯನ್ನು ಒಂದು ಸುತ್ತು ಹಾಕುತ್ತದೆ. ಗುಂಪು ಮತ್ತೆ ಪ್ರವೇಶಿಸುವ ಮುಂಚೆಯೇ ವಜ್ರಮಟ್ಟಿಯ ಆಲದ ಮರದ ಕಟ್ಟೆಯ ಮೇಲೆ ಗೌಡರು ಆಸೀನರಾಗಿದ್ದಾರೆ. ಗುಂಪು ಸಭೆಯಾಗಿ ಮಾರ್ಪಡುತ್ತದೆ. ಪೂಜಾರಿ ಇನ್ನು ರೊಯ್ಯ ಅಂತ ಅಳ್ಳುತ್ತಲೇ ಇದ್ದಾನೆ.)
ಗೌಡ: ರೀ ಪುಜಾರ್ರೆ, ಬಾ ಮುಚ್ರಿ ಸಾಕು (ಪೂಜಾರಿ ಬಾ ಮುಚ್ಚಿಕೊಂಡು ದುಖಿಃಸುವುನು)
ಗಂಗ್ಯಾ: ನೀವು ಏನಾದ್ರೂ ತುಡುಗ ಮಾಡಿರೇನ್ರಿ.
(ಪುಜಾರಿ ಬಾ ಮುಚ್ಚಿಕೊಂಡೆ ದುಖಿಸುತ್ತಾ ಇಲ್ಲವೆಂದು ಗೋಣು ಹಾಕುವನು)
ಗೌಡ: ಮತ್ಯಾಕ ಹೆದರಕೊಂಡು ಅಳ್ಳಾಕ
(ಪುಜಾರಿ ಬಾ ಮುಚ್ಚಿಕೊಂಡೆ ಜೋರಾಗಿ ಸೌಂಡು ಮಾಡುವನು)
ಗೌಡ: ರ್ರಿ ಏನಾತು ಅಂತ ಬೊಗಳ್ರಿ, ಯಾಕ ಬಾ ಮುಚ್ಚಕೊಂಡು ಒಂದೆ ಅಂತಿರಿ
ಪುಜಾರಿ: ನೀವು ಬಾ ಮುಚ್ಚಿ ಅಂದಿದ್ರೆಲ್ಲ, ಅದಕ್ಕ ಮುಚ್ಚಿದ್ದೆ.
ಗೌಡ: ತುಗೊರೆಪಾ, ನಮಗ ಎಂಥ ಪುಜಾರಿ ಗಂಟ ಬಿದ್ದಾನ ನೋಡ್ರಿ, ರಿ ಇದ್ದದ್ದ ಇದ್ದಂಗ ಹೇಳಿದ್ರಿ ಪಾಡಾತು. ಇಲ್ಲಂದ್ರ ನೀವು ತುಡುಗ ಮಾಡಿರಿ ಅಂತ ಕೇಸ್ ಜಡದ ಬಿಡ್ತೇನು.
ಪೂಜಾರಿ: ಯಪ್ಪಾ ಗೌಡ್ರ ಯಾವ ಮಾತಂತ ಆಡತಿರಿ, ಒಳ್ತು ಅನ್ರಿ. ದಿನಾ ಅಂವನ ಮೈ ತೊಳದು ಹೂ ಎರಿಸಿ ಸ್ವಂತ ಮಗನ್ನ ಜ್ವಾಪಾನ ಮಾಡಿದಂಗ ಮಾಡತಿದ್ದೆ. ಈಗ ನೋಡಿದರ ಅಂವನ ಇಲ್ಲ. ಪುಜಾರಿ ಮತ್ತೆ ರೊಂಯ್ಯ ಅಂತ ಅಳ್ಳಲು ಶುರುಹಚ್ಚಿಕೊಳ್ಳುವಷ್ಟರಲ್ಲೆ ಗೌಡ ಸಿಟ್ಟಿಲೇ ನೋಡಿದ್ದರಿಂದ ತೆಪ್ಪಗಾಗುವನು)
ಗೌಡ: (ಚಿಂತಿತನಾಗಿ) ಈ ಮನುಷ್ಯ ಜೀವ ಯಾದಕ್ಕ ಹುಟ್ಟೇತಿ. ತಪ್ಪು ಮಾಡಾಕ ಹುಟ್ಟೇತಿ. ಪರಪಂಚದಾಗ ನನ್ನೂ ಸೇರಿಸಿಕೊಂಡು ರಗಡ ಜನಾ ತೆಪ್ಪು ಮಾಡ್ತಿವಿ. ತೆಪ್ಪ ಮಾಡಿದಾಗ ನಾನು ಇದೊಮ್ಮೆ ಹೊಟ್ಯಾಗ ಹಾಕ್ಕೋ ಹನುಮಪ್ಪ ಅಂತ ಕೈ ಮುಗಿತಿದ್ದೆ. ಅಷ್ಟಕ್ಕ ಅದು ಮಾಫ್ ಆಕ್ಕಿತ್ತು. ಆಮ್ಯಾಲ ಯಥಾ ಪ್ರಕಾರ ಮುಂದಿನ ತೆಪ್ಪ ಮಾಡಾಕ ದಾರಿ ಆಕ್ಕಿತ್ತು. ಈಗ ಹನುಮಪ್ಪ ಗುಡಿಯಾಗ ಇಲ್ಲ ಅಂದ್ರ ಮುಂದಿನ ತೆಪ್ಪು ಮಾಡಾಕ ದಾರಿನೆ ಇಲ್ಲ. ಎಲ್ಲ ಊರ ಗುಡಿಯಾಗ ದೇವರು ಇರೋದ್ಯಾವುದಕ್ಕ, ಆ ಊರ ಮಂದಿ ಮಾಡೋ ತೆಪ್ಪಗಳನ್ನು ಹೊಟ್ಯಾಗ ಹಾಕ್ಕೊಳುದಕ್ಕ. ನಮ್ಮಂಥ ನರಮನುಷ್ಯರ ತೆಪ್ಪಗಳನ್ನು ಹೊಟ್ಯಾಗ ಹಾಕ್ಕೊಳು ಆ ದೇವರ$ ಈಗ ಕಳುವಾಗ್ಯಾನಂದ್ರ ಎಂಥ ಕಾಲ ಬಂತು ಅಂತ…
(ಪುಜಾರಿ ಮತ್ತೆ ಅಳು ಜೋರು ಮಾಡುವನು)
ಗಪ್ ಇರು, ಈಗಾರ ಸ್ವಲ್ಪ ಸುಮ್ಮನಾಗಿ ಏನಾಗೇತಿ ಅಂತ ಹೇಳು
ಪೂಜಾರಪ್ಪ: (ಅಳ್ಳುತ್ತಾ) ದಿನಾ ಹೊದಂಗ ಗುಡಿಗೆ ಹ್ವಾದ್ನಿರಿ. ಆದ್ರ ಅಲ್ಲಿ ಹನುಮಪ್ಪನ ಇರಲಿಲ್ಲ. ನಮ್ಮನ್ನೆಲ್ಲ ಕಾಪಾಡೋ ಆ ದೇವರನ್ನು ನಾವು ಕಾಪಾಡಲಿಲ್ಲಲಾ ಅಂತ ನನಗ ಅಳೂ ಬಂತ್ರಿ. ಹಂಗ ಓಡಿ ಬಂದ ಬಿಟ್ನಿ. (ಮುಸಿ ಮುಸಿ ಅಳ್ಳುತ್ತಾ)
ಭರಮ್ಯಾ: ಅವರೌರ ಆದರೆಗಟ್ಟಿ ಮಂದಿನ ನಮ್ಮ ದೇವರನ್ನು ಹೊತ್ತುಗೊಂಡು ಹೋಗ್ಯಾರ್ರಿ ಗೌಡ್ರ.
ಗೌಡ: ಅದೆಂಗ ಹೇಳ್ತಿ?
ಭರಮ್ಯಾ: ನಾನು ನಿನ್ನೆ ರಾತ್ರಿ ಗುಡಿ ಹಿಂದಿನ ಹೊಲದಾಗ ಕಬ್ಬಿಗೆ ನೀರು ಬಿಟ್ಟಿದ್ನಿ. ಆಗ ಧರೆಗಟ್ಟಿ ಕಡೆಂದ ಡರ್‌ರ್‌ರರ್ ಅಂತ ಟ್ಯಾಕ್ಟರ್ ಬಂತರಿ. ಬಂದವರ ಹನುಮಪ್ಪಗ ಪೂಜಿ ಮಾಡಿ ಹಾರಿ ಗುದ್ದಲಿಂದ ಮಂಟಪ ಒಡ್ದು ಹನುಮಪ್ಪನ್ನ ಅನಾಮತ್ತಾಗಿ ಎತ್ತಿಕೊಂಡು ಟ್ಯಾಕ್ಟರ್‌ಗೆ ಹಾಕ್ಕೊಂಡು ಹೋಗಿಬಿಟ್ರು. ಪಾಪ, ನಮ್ಮ ಹನುಮಪ್ಪ ತಂಡ್ಯಾಗ ನಡುಗಕೋತ ದೇವರಂಗ ಟ್ಯಾಕ್ಟರ್‌ನ್ಯಾಗ ಸುಮ್ಮನ ಕುಂತಿದ್ದ.
ಗೌಡ: ನಿನೇನ್ ಮಾಡ್ತಿದ್ಯೋ ಅಲ್ಲಿ. ಅವರನ್ನ ನಿನ್ನ ಜೀವ ಕೊಟ್ಟಾದ್ರೂ ತಡಿಬೇಕಿತ್ತು.
ಭರಮ್ಯಾ: ಎಪ್ಪಾ, ನಾ ಉಳದ್ರ ಮುಂದ ದೇವರು ದಿಂಡರು ಎಲ್ಲ, ನಾನ ಹೋಗಿಬಿಟ್ರ ಏನು ಮಾಡೂದೈತಿ ಅನಕೊಂಡು ಸುಮ್ಮನ ಕುಂತಿದ್ನಿರಿ.
ರವಿ: ಅಪ್ಪಾ. ಭರಮಪ್ಪ ಹೇಳೂದ್ರಲ್ಲಿ ಖರೆ ಐತಿ. ಈ ಕಾಲದಲ್ಲಿ ಕಲ್ಲು ದೇವರ ಬಗ್ಗೆ ನಾವಿಷ್ಟು ತಲೆ ಕೆಡಿಸಿಕೊಳ್ಳಬಾರದು ಅನಿಸುತ್ತೆ. ಅದು ಹೋದರೆ ಹೋಗಲಿ ಬೇರೆ ಮೂರ್ತಿ ತಂದು ಪ್ರತಿಷ್ಠಾಪಿಸೋಣು.
ಗೌಡ: ಅಬಬಾಬಾ, ನೋಡ್ರೆಪಾ, ಮಗ ನನಗೆ ಬುದ್ಧಿ ಹೇಳಾಕ ಬಂದ. ನೋಡು ಮಗನೆ ನೀನು ಪ್ಯಾಟ್ಯಾಗ ಓದಿಕೊಂಡು ಬಂದಿ. ನಿನಗ ಇದೆಲ್ಲ ತಿಳಿದುಲ್ಲ, ಸ್ವಲ್ಪ ಸುಮ್ಮನ ಮುಚ್ಚಕೊಂಡು ಕೂಡು. (ಜನರತ್ತ ತಿರುಗಿ) ಮುಂದ ಏನು ಮಾಡೂದು ಅಂತಿರಿ?
ಒಬ್ಬ: ಸೀಮೆಹನುಮಪ್ಪನ ಕಳ್ಳತನ ಮಾಡಬೇಕಂತ ಧರೆಗಟ್ಟಿ ಹುಂಬರು ಬಾಳ ಸಲ ಪ್ರಯತ್ನ ಮಾಡ್ತಾ ಇದ್ರು. ಈ ಸಲ ಗೆದ್ದುಬಿಟ್ಟಾರ. ಸೀಮೆ ಹನುಮಪ್ಪನ ಮ್ಯಾಲ ಅವರಿಗೆ ಎಷ್ಟು ಹಕ್ಕು ಇದೆಯೋ ಅಷ್ಟ ಹಕ್ಕು ನಮಗೂ ಐತಿ. ನಾವು ಸುಮ್ಮನಿರಬಾರದು ಇನ್ನ.
ಇನ್ನೊಬ್ಬ: ನಾವೇನು ಬಳಿ ತೊಟ್ಟಿಲ್ಲ, ಕೊಡ್ಲಿ ಕುಡಗೋಲು ತುಗೊರಿ, ಸೀವಿ ಹನುಮಪ್ಪನ ಹೊತಗೊಂಡು ಬರೂಣು,
ಒಬ್ಬ: ಸಮಾಧಾನ, ಮೊದಲು ಸರಳ ರೀತಿಯೊಳಗ ಕೇಳಿ ನೋಡೂಣು. ಆಮ್ಯಾಲ ಇದ್ದ ಐತೆಲ್ಲ ದಂಡಂ ದಶಗುಣಂ.
ಮತ್ತೊಬ್ಬ: ನಾವು ದಂಡ ತುಗೊಂಡಾಗ ಅವರೆನೂ ಸುಮ್ಮನ ನಿಂತಿರೂದಿಲ್ಲ. ಈಗ ಅದೆಲ್ಲ ನಡೆಯೋದಿಲ್ಲ. ಕಾನೂನು ಕೈಗೆ ತುಗೊಳ್ಳೋದು ಸರಿಯಲ್ಲ. ಪೊಲೀಸ್ ಕಂಪ್ಲೇಂಟ್ ಕೊಡೋದು ಒಳ್ಳೆದಂತ ಕಾಣಿಸತೈತಿ.
ರವಿ: ನಾನೊಂದು ಹೇಳ್ಲಾ, ನನ್ನ ಮಾತು ನೀವು ಕಿವಿಯಾಗ ಹಾಕ್ಕೊಳಂಗಿಲ್ಲ. ಆದ್ರೂ ಹೇಳೂದು ನನ್ನ ಕರ್ಮ. ತನ್ನನ್ನು ತಾನ ರಕ್ಷಿಸಿಕೊಳ್ಳಲಾಗದ ಕಲ್ಲು ದೇವರಿಗಾಗಿ ಯಾಕ ಇಷ್ಟೊಂದು ತೆಲಿ ಕೆಡಿಸಿಕೋತಿರಿ. ಅದರ ಬದ್ಲಿ ಇನ್ನೊಂದು ಕಲ್ಲ ತಂದು ಇಟ್ಟರ ಮುಗಿತು.
ಇನ್ನೊಬ್ಬ: ರವಿಗೌಡ್ರ ನೀವು ಊರ ಗೌಡ್ರ ವಂಶದವರಾಗಿ ಊರು ಕಾಯೋ ಕೆಲಸ ಮಾಡಬೇಕು. ಅದು ಬಿಟ್ಟು ದೇವರಿಗೆ ಕಲ್ಲು ಮಣ್ಣು ಅಂತಿರಲ್ರಿ. ಇದು ಬೇಸಿ ಅಲ್ಲ ನೋಡ್ರಿ.
ಒಬ್ಬ: ಜಾಸ್ತಿ ಸಾಲಿ ಓದಿದ್ರ ಹಿಂಗ ಆಗೋದು, ಸಣ್ಣಗೌಡ್ರೆ ದೇವರನ್ನ ಹಿಂಗ ಆಡಕೊಂಡ್ರ, ಮುಂದ ಊರ ಉಡಾಳ ಹುಡ್ರು ಇನ್ನೆಷ್ಟು ಆಡಕೋಬಾರದು. ದೇವರು, ದೊಡ್ಡವರು ಸಡ್ಲ ಆಗಿ ಮಾತಾಡಬಾರದು. ಈಗಿನ ಹುಡುಗರಿಗೆ ಒಟ್ಟ ಗೌರವ ಇಲ್ಲ.
ತುಳಸಿ: ಅಣ್ಣ ನೀ ಸುಮ್ನ ಕೂಡ್ರು. ನಿನಗ ಏನು ಗೊತ್ತಾಗಂಗಿಲ್ಲ. ಒಳಗ ಹೋಗಿ ಓದಕೋ ಹೂಗು, ನಿನ್ನ ಪುಸ್ತಕ ಕರಿಯಾಕ ಹತ್ಯಾವು, ಹೋಗು.
ಹುಚ್ಚಮಲ್ಲ: (ಚೀರುತ್ತಾ ಬಂದು) ದೇವರು ಹ್ವಾದ. ಇನ್ನ ನಮ್ಮನ್ನ ಯಾರು ಕಾಪಾಡೋರಿಲ್ಲ, ನಮ್ಮನ್ನು ನಾವು ಕಾಪಾಡಕೋಬೇಕು. ಅಯ್ಯಯ್ಯೋ ದೇವರು ಸತ್ತ. ದೇವರು ಸತ್ತ.
ಜನರು: ಏ ಆ ಹುಚ್ಚ ನನ್ನ ಮಗ ಇಲ್ಲಿಗ್ಯಾಕ ಬಂದ. ಆ ಕಡೆ ಒದ್ದ ಕಳಿಸ್ರೋ ಅವನ್ನ. (ಒಂದಿಷ್ಟು ಜನ ಅವನನ್ನು ನೂಕಲು ಬರುವರು.)
ಹುಚ್ಚಮಲ್ಲ: (ಕೊಸರಿಕೊಂಡು) ಏ ಕೈ ಬಿಡ್ರೋ, ನಂದೊಂದು ಪ್ರಶ್ನಿ ಐತಿ. ಅದಕ್ಕ ಉತ್ತರ ಕೊಟ್ರ ನಾ ಸುಮ್ಮಕ ಹೊಕ್ಕಿನಿ
(ಜನರು ಅವಕ್ಕಾಗಿ ನೋಡುವರು)
ಹುಚ್ಚಮಲ್ಲ: ದೇವರು ಸರ್ವ ಶಕ್ತ ಹೌದಿಲ್ಲೋ?
ಜನ: ಹೌದು.
ಹುಚ್ಚ: ಸಕಲ ಪಂಡಿತ ಹೌದಲ್ಲೋ?
ಜನ: ಹೌದು.
ಹುಚ್ಚ: ಭೂತ, ಭವಿಷತ್ತು, ವರ್ತಮಾನಗಳನ್ನು ಅರಿತವ ಹೌದಲ್ಲೋ?
ಜನ: ಏ ಮುಂದ ಹೇಳಲೇ
ಹುಚ್ಚ: ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಹೌದಲ್ಲೋ?
ಜನ: ಹೌದು ಹೌದು ಹೌದು, ಮುಂದ ಹೇಳ್ತಿಯೋ ಏನ್( ಹೊಡೆಯಲು ಹೋಗುವರು)
ಗೌಡ: ಏ ಅಂವ ಹೇಳಿ ಕೇಳಿ ಹುಚ್ಚ. ಅಂವನ ಮಾತ ಏನ್ ಕೇಳ್ತಿರಿ ಕಳಿಸ್ರಿ ಅಂವನ್ನ
ಹುಚ್ಚ: ತಡಿರಿ ಗೌಡ್ರ, ಈಗ ಬಂತು ಪ್ರಶ್ನೆ, ಪ್ರಶ್ನೆ ಕೇಳಿದ್ರ ನಿಮ್ಮದು ಹಂಗ ಅಳಗಾಡಬೇಕು.
(ಜನ ಹೋ ಎಂದು ಕೈ ಮಾಡುವರು)
ಹುಚ್ಚ: ಸಬ್‌ಕೋ ಗಪಚುಪ್( ಎಲ್ಲರೂ ಮೌನ) ಸರ್ವಶಕ್ತ, ಸಕಲ ಪಾರಂಗತ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾದ ದೇವರು ಅಲಿಯಾಸ್ ಹನುಮಪ್ಪನ್ನನ್ನು ಕದ್ದು ಹೊತ್ತುಗೊಂಡ ಹ್ವಾದ್ರು ಯಾಕ್ ಸುಮ್ಮನಿದ್ದ? ದೇವರು ತನ್ನನ್ನು ತಾನು ರಕ್ಷಣೆ ಮಾಡಕೊಳ್ಳಬೇಕೋ ಬೇಡೋ, ಕಳ್ಳತನ ಮಾಡೋ ದುಷ್ಟರಿಗೆ ಶಿಕ್ಷಾ ಕೋಡಬೇಕೋ ಬ್ಯಾಡೋ?
ಗೌಡ: ಏ ಹುಚ್ಚ ಸೂಳಿ ಮಗನ್ನ ಕೂಡ ಏನ್ ಮಾತಾಡಿತಿರೋ. ಊರ ಹನುಮಪ್ಪ ಕಳುವಾಗಿರೋದು ಮರ್‍ಯಾದಿ ಪ್ರಶ್ನಿ ಐತಿ. ಮೊದಲ ಅಂವನ್ ಹುಡುಕೋ ಕೆಲಸ ಮಾಡೋನು
ಹುಚ್ಚ: ಗೌಡ್ರ, ಮೊದಲು ಆ ನಿಮ್ಮ ದೇವರಿಗೆ ಮರ್‍ಯಾದಿಲ್ಲ. ಕಳ್ಳರ ಹೆಗಲ ಮ್ಯಾಲ ಕುಂತುಗೊಂಡು ಓಡಿ ಹ್ವಾದ. ಇನ್ನ ಊರ ಮರ್‍ಯಾದಿ ಪ್ರಶ್ನಿ ಎಲ್ಲಿಂದ ಬಂತು. ಇಲ್ಲಿ ನೀವು ಭಕ್ತರು ಪೇಚಾಡಕ ಹತ್ತಿರಿ. ಅಲ್ಲಿ ಅಂವ ಒಂಕ ಮೋತಿ ಹನುಮಪ್ಪ ಕಳ್ಳರ ಕೂಡ ಸುಮ್ಮನ ಕುಂತಿರ್‍ತಾನ. ಅಂತ ದೇವರು ನಮಗ ಬೇಕಾ. ಹೋಗಲಿ ಬಿಟ್ಟ ಬಿಡ್ರಿ ಅಂವನ, ಅಂವನೌನ.
ಗೌಡ: (ಸಿಟ್ಟಿಗೆದ್ದು) ಏ ಮುಖ ಏನ್ ನೋಡ್ತಿರಿ, ಒದ್ದು ಓಡಿಸರಲೇ ಅಂವನ್ನ (ಜನ ಎಲ್ಲ ಮುಗಿ ಬಿಳುವರು ಕಳ್ಳನನ್ನು ಹೊಡೆಯುವರು.) ರವಿಗೌಡ ಬಿಡಿಸುವನು. ಹುಚ್ಚ ಜೋರಾಗಿ ಇವರಿಗೆ ಬೈಯುತ್ತಾ ಓಡಿ ಹೋಗುವನು.)
ರವಿಗೌಡ: ಇದ್ದುದು ಹೇಳಿದ್ರ ಎದ್ದು ಬಂದು ಎದಿಗೆ ಒದ್ರಂತ. ಪಾಪ, ಅಂವ ಖರೆನ ಹೇಳ್ಯಾನ. ಅಂವ ಶುದ್ಧ ಅದಾನ. ನೀವೆಲ್ಲ ಹುಚ್ಚ ಇದ್ದಿರಿ. ಅಂವಗ ಇರುವಷ್ಟು ಬುದ್ದಿ ನಿಮಗ ಇಲ್ಲ.
ಜನ: ಗೌಡ್ರ, ಸಣ್ಣಗೌಡ್ರ ಸುಮ್ಮನಿರಾಕ ಹೇಳ್ರಿ, ನಿಮ್ಮ ಮುಖ ನೋಡ್ಕೊಂಡು ಅವರನ್ನು ಬಿಟ್ಟಿ”. ಇಲ್ಲಂದ್ರ ಹುಚ್ಚಗ ಬಿದ್ದಂಗ ಇವರಿಗೂ ಹೊಡ್ತ ಬಿಳ್ತಾವು.
ಗೌಡ್ರು: ಏ ಹೋಗ್ಲಿ ಬಿಡ್ರ್ಯೋ. ಆ ಹುಡುಗಂದೂ ತೆಲಿಗೆ ಹಚಗೋಬ್ಯಾಡ್ರಿ. ಮುಂದ ಏನು ಮಾಡೋದು ಅಷ್ಟ ಹೇಳಿ.
ಮತ್ತೊಬ್ಬ: ನಾವು ಯಾಕ ಎಂಎಲ್ಲೆಎಗೆ ಒಂದು ಮಾತು ಕೇಳಬಾರದು. ಎರಡು ಊರಿಗೂ ಸಂಬಂಧಪಡತಾರು ಅವರು.
ಗೌಡ್ರು: ಇದು ಒಳ್ಳೆ ಐಡಿಯಾ(ಮೊಬೈಲ್ ತೆಗೆದು ಫೋನ್ ಮಾಡುವರು)ಸಾಹೆಬರ ನಮಸ್ಕಾರ, ನಾನು ವಜ್ರಮಟ್ಟಿ ದಾನಪ್ಪಗೌಡ.
ಎಂಎಲ್ಲೆ: ಓಹೋ ವಜ್ರಮಟ್ಟಿ ಗೌಡ್ರು, ಈಗಷ್ಟ ನಿಮ್ಮೂರಲ್ಲಿ ಕೊಳವೆಬಾ” ತೆಗೆಸೋದ್ರ ಬಗ್ಗೆ ಜಡ್‌ಪಿ ಸಿಇಓಗೆ ಫೊನ್ ಹಚ್ಚಿದ್ದೆ. ಈಗ ನೋಡಿದ್ರ ನಿಮ್ಮ ಫೋನ್ ಬಂತು. ಹೇಳ್ರಿ ಎನ್ “ಷಯ?
ಗೌಡ: ಇಲ್ಲೊಂದು ಪ್ರಾಬ್ಲಂ ಆಗೇತ್ರಿ ಸಾಹೆಬ್ರ, ನಮ್ಮೂರು ಸೀ” ಹನುಮಪ್ಪನ್ನ ದರೆಗಟ್ಟಿ ಜನ ಕಳ್ಳತನ ಮಾಡಕೊಂಡು ಹೋಗ್ಯಾರ. ನಿಮಗ ಗೊತ್ತಲ, ನಮ್ಮೂರು ಹುಡ್ರು ಬಾಳ ಬೆರಕಿ, ಕೊಡ್ಲಿ ಕುಡಗೋಲು ಅನ್ನಾಕ ಹತ್ಯಾರ. ಅದಕ್ಕ ನೀವ ಸ್ವಲ್ಪ ಬಂದು ಬಗಿಹರಿಸಬೇಕಿತ್ತು.
ಎಂಎಲ್ಲೆ: (ಗಾಬರಿಯಾಗಿ) ಏನು, ಗುಡಿಯಾನ ಹನುಮಪ್ಪನ ತುಡುಗು ಮಾಡಕೊಂಡು ಹೋಗ್ಯಾರಾ? ಅವಕ್ಕೇನು ದೆವ್ವ ಬಡಿದೈತ್ರಿ ಗೌಡ್ರ. ಯಾಕಂತ?
ಗೌಡ: ನಿಮಗ ಗೊತ್ತು ಇರೂದ ಐತೆಲ್ಲ. ಸೀಮೆ ಹನುಮಪ್ಪ ಜಗಳ.
ಎಂಎಲ್ಲೆ ಹೌದೌದು, ತಡ್ರಿ ತಡ್ರಿ, ಧರೆಗಟ್ಟಿಯೊಳಗ ನಮ್ಮ ಪಕ್ಷದ ಮುಖಂಡ ಇದ್ದಾನಲ್ಲ ಪಡದಯ್ಯ. ಅಂವಗ ಹೇಳ್ತಿನಿ. ಅವರ ಊರು ಹುಡ್ರುಗೆ ಬುದ್ದಿ ಮಾತು ಹೇಳಿಸಿ ದೇವರನ್ನು ಹೊಳ್ಳಿ ತಂದು ಕೊಡುವಂಗ ಮಾಡ್ತೇನಿ.
ಗೌಡ: ಅಷ್ಟ ಮಾಡಿ ಪುಣ್ಯ ಕಟಕೋರಿ.
ಎಂಎಲ್ಲೆ: ಅಂದಂಗ ಅದು ಸೀಮಿ ಹನುಮಪ್ಪನ ಗುಡಿ ಹಳಿದಾಗೈತೆಲ್ಲ.
ಗೌಡ: ಹೌದ್ರಿ ಸಾಹೆಬ್ರ, ನಿಮಗ ಒಂದು ಅರ್ಜಿ ಕೊಟ್ಟಿದ್ದಿವು. ಜೀರ್ಣೋದ್ಧಾರ ಮಾಡಿಸಬೇಕು ಅಂತ. ನೀವು ಸ್ವಲ್ಪ ಮನಸ್ಸು ಮಾಡಿದ್ರ ದೇವರಿಗೆ ಚಲೋತಂಕ ನೆಳ್ಳ ಮಾಡಬಹುದಿತ್ತು.
ಎಂಎಲ್ಲೆ: ನಾನು ಅದನ್ನ ಹೇಳೋನಾಂತಿದ್ದೆ. ಗುಡಿನ ಭರ್ಜರಿಯಾಗಿ ರಿಪೇರಿ ಮಾಡಿಸಿ ಅದಕ್ಕ ಒಪ್ಪುವಂಥ ಹೊಸ ಮೂರ್ತಿ ತಂದು ಪ್ರತಿಷ್ಠಾಪನಾ ಮಾಡೋಣು. ಸುಮ್ಮನೆ ಯಾಕ ಜಗಳ. ಆ ಧರೆಗಟ್ಟಿ ಹುಡುಗರು ಅಷ್ಟ ಸರಿ ಇಲ್ಲ. ಗಾಳಿ ಗುದ್ದಿ ಯಾಕ ಮೈ ನೂಸುಕೊಳ್ಳೋದು ಅಂತ.
ಗೌಡ: ಸಾಹೇಬ್ರ ಇದೊಂದು ಬಿಟ್ಟು ಬೇಕಾದ್ದು ಕೇಳ್ರಿ, ನಮಗ ಮೂಲ ದೇವರು ಆಗಬೇಕು, ಇಲ್ಲಂದ್ರ ನಿಮ್ಮೂರಿಗೆ ಕಂಟಕ ಐತಿ ಅಂತ ಸ್ವಾಮಿಗೊಳು ಹೇಳಿಕಿ ಹೇಳ್ಯಾರ.
ಎಂಎಲ್ಲೆ: ಹಂಗಾರ, ಆತು ತೊಗೋರಿ, ಅವರನ್ನು ಒಂದು ಮಾತು ಕೇಳಿ ಹೇಳ್ತಿನಿ. ಇವತ್ತು ಅಲ್ಲಿಗೆ ಹೋಗಿ ವಿಚಾರಿಸ್ತಿನಿ. ನೋಡೂಣು ಏನಾಗತ್ತಂತ. (ಫೋನ್ ಕಟ್ಟ ಆಗುವುದು)
ಗೌಡ: ಎಂಎಲ್ಲೆ ಎಲ್ಲ ಸರಿ ಮಾಡ್ತಿನಿ ಅಂತ ಹೇಳ್ಯಾರ. ನೋಡೂನು ಏನಾಗತ್ತಂತ, ರಂಗ್ಯಾ ನೀನು ಭರ್‍ಮಪ್ಪನ ಕರಕೊಂಡು ಧರೆಗಟ್ಟಿಯೊಳಗ ಏನ್ ಪರಿಸ್ಥಿತಿ ಐತಿ ಅಂತ ನೋಡಕೊಂಡು ಬಾ.
ರಂಗ: ಆತ್ರಿ.
(ಎಲ್ಲರೂ ಗುಸು ಗುಸು ಮಾತಾಡುತ್ತಾ ಸಭೆಂದ ನಿರ್ಗಮಿಸುವರು. ರವಿ ಅಲ್ಲೆ ಕುಳಿತಿದ್ದಾನೆ. ಎಲ್ಲ ಹೋದ ಮೇಲೆ ಎದ್ದು ಬಂದು)
ರವಿ: ಈ ಹಾಳಾದ ಜನರಿಗೆ ಯಾವತ್ತು ಬುದ್ದಿ ಬರುತ್ತೋ. ಪಾಪ, ಸತ್ಯ ಮಾತಾಡಿದ ಆ ಮಲ್ಲಂಗೂ ಹುಚ್ಚಮಲ್ಲ ಅಂದು ಹೊಡ್ದು ಕಳಿಸಿದ್ರು. ಒಂದು ಕಲ್ಲು ಮೂರ್ತಿಗೆ ಇಷ್ಟೊಂದು ಜಗಳ ಮಾಡೋದು ನೋಡಿದ್ರ ನಮ್ಮ ದೇಶದ ಭವಿಷ್ಯದ ಬಗ್ಗೆ ಭಯವಾಗುತ್ತೆ. ಬುದ್ಧ ಬಸವಣ್ಣ ಚಾರ್ವಾಕರು ಹುಟ್ಟಿ ಬಂದ ನಾಡಿನಲ್ಲಿಯೆ ಸ್ಥಾವರಗಳು ಇಷ್ಟೊಂದು ವಿಜೃಂಭಿಸುತ್ತಿವೆ ಎಂದರೆ ಅವರು ಹುಟ್ಟದಿದ್ದರೆ ಇನ್ನೇನು ಗತಿ ಇತ್ತೋ,. ಏನು ಮಾಡುವುದು, ಕಾಯುತ್ತಿದ್ದೇನೆ ಕಾಲ ಮಾಗುವುದಕ್ಕಾಗಿ. ಕಾಯುತ್ತಲೇ ಇರುತ್ತೇನೆ…

ತೆರೆ ಬೀಳುವುದು

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s