ಹೊಸ ವರ್ಷದ ಶುಭಾಶಯಗಳು ಎಲ್ಲರಿಗೂ. ಹೆಚ್ಚು ಮಾತಿಲ್ಲದೆ, ಒಂದು ಚೆಂದದ ಕವಿತೆಯೊಂದಿಗೆ ‘ಹೊಸತಲೆಮಾರು’ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಕವಿ ಚಂದ್ರು ತುರವೀಹಾಳರಿಗೆ ಆಭಾರಿ.
ಗುರುತು
ಮಾಗಿ ತನ್ನ ಹೃದಯದಲ್ಲಿ ವಸಂತವಿದೆ ಎಂದರೆ
ಯಾರು ತಾನೆ ಅದನ್ನು ನಂಬಲು ಸಾಧ್ಯ?
-ಖಲೀಲ್ ಗಿಬ್ರಾನ್
ಒಂದು ವಸಂತದಿಂದ ಮತ್ತೊಂದು ವಸಂತದೆಡೆಗೆ
ನೀ ನಡೆದು ಹೋಗಲು ಕಣ್ಣೆಲೆಗಳ ಉದುರಿಸಿದ
ಒಂದು ಋತು ನಾನು, ಶಿಶಿರ ನನ್ನ ಹೆಸರು
ಕಪ್ಪು ಕಲೆಗಳಿವೆ ಎಂದು ದೂರಿದರೂ ಚಂದ್ರನ
ಲಕ್ಷ ನಕ್ಷತ್ರಗಳ ನಡುವೆ ನಗುತ್ತ ಸಾಗಿ
ತನ್ನ ತೋರಿ ತಾಯಂದಿರುಣಿಸುವ ಅನ್ನವನೆಂದೂ ವಿಷವಾಗಿಸಲಿಲ್ಲ
ನೀ ನೀಡಿದ ಪೆಟ್ಟು ಪಕ್ಕಡೆಯೊಳಗೆ ಹೊತ್ತು
ಮುಗಿಲಿಗೆ ಕಣ್ಣಿಟ್ಟು ನಾ ಮಳೆಗರೆದೆನೆ ಹೊರತು
ನೆಲದೊಳಗೆ ನೋವಿಟ್ಟು ಕೀವು ತುಂಬಲಿಲ್ಲ
ಹಸಿರು ಅಮಲನು ಕಂಡು ಹಾಡುವ
ನಿನ್ನ ಕಣ್ಣ ಕೋಗಿಲೆಗೆ ನಾ ಮಾಗಿಯ ಚೆಲುವ ತೋರಲೆಂತು?
ಅವನು- ಇವನೆನ್ನುವ
ನಿನ್ನ ಬದುಕಿನ ವಸಂತನಗಳ ನಡುವೆ
ಬಂದು ಹೋದ ಒಂದು ಶಿಶಿರ ನಾನು
ಬಯಲೆಂಬುದು ನನ್ನ ಗುರುತು.
-ತುರುವೀಹಾಳ ಚಂದ್ರು